July 29, 2026
#ಬೆಂಗಳೂರು

2.5 ವರ್ಷವಾದ ಮೇಲೆ ಸಚಿವ ಸಂಪುಟ ಬದಲಾವಣೆ

ಬೆಂಗಳೂರು: ಎರಡೂವರೆ ವರ್ಷದ ಮೇಲೆ ಸಚಿವ ಸಂಪುಟ ಬದಲಾವಣೆ ಆಗಲಿದೆ ಎಂದು ಹೇಳಿಕೆ ನೀಡುವ ಮೂಲಕ ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ್‌ ಹೊಸ ಬಾಂಬ್‌ ಸಿಡಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಈಗ ಎಲ್ಲರಿಗೂ ಮಂತ್ರಿಸ್ಥಾನ ನೀಡಲು ಸಾಧ್ಯವಿಲ್ಲ. ಹೀಗಾಗಿ ಎರಡೂವರೆ ವರ್ಷದ ಬಳಿಕ ನೀಡುವುದಾಗಿ ಸುರ್ಜೇವಾಲ ಸೇರಿದಂತೆ ಎಲ್ಲಾ ಕಾಂಗ್ರೆಸ್‌ ನಾಯಕರು ಹೇಳಿದ್ದಾರೆ. ಸಚಿವ ಸಂಪುಟ ಬದಲಾವಣೆ ಮಾಡುವ ಪ್ರಸ್ತಾಪವಿದೆ ಎಂದು ಹೇಳಿದ್ದಾರೆ ಎನ್ನುವ ಮೂಲಕ ಸಂಚಲನ ಮೂಡಿಸಿದ್ದಾರೆ.

ನಾನು ಸೀನಿಯರ್‌ ಆಗಿದ್ದರಿಂದ ಮಂತ್ರಿ ಸ್ಥಾನ ಸಿಗಬೇಕಿತ್ತು. ಆದರೆ ಜಾತಿ ನೋಡಿ ಮಂತ್ರಿ ಮಾಡಿದ ಕಾರಣ ನನಗೆ ಸಿಕ್ಕಿಲ್ಲ. ಜಾತಿ ನೋಡಿ ಮಂತ್ರಿ ಸ್ಥಾನ ಕೊಡಬೇಡಿ. ಸೀನಿಯರ್, ಅನುಭವ ನೋಡಿ ಮಂತ್ರಿ ಮಾಡಿ ಎಂದು ನಮ್ಮ ನಾಯಕರಿಗೆ ಮನವಿ ಮಾಡಿದ್ದೇನೆ ಎಂದರು. 

ಎರಡೂವರೆ ವರ್ಷವಾದ ಮೇಲೆ ಸಚಿವ ಸ್ಥಾನ ಕೊಡುತ್ತಾರೆ ಎಂಬ ನಂಬಿಕೆ, ಭರವಸೆಯಿದೆ. ಅವರು ಮಂತ್ರಿ ಸ್ಥಾನ ನೀಡಿದರೂ ಪಕ್ಷದಲ್ಲಿ ಇರುತ್ತೇನೆ.‌ ಕೊಡದೇ ಹೋದರೂ ಇರುತ್ತೇನೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಸುರ್ಜೇವಾಲ, ವೇಣುಗೋಪಾಲ್ ಸೇರಿ ಎಲ್ಲಾ ನಾಯಕರಿಗೂ ನಮ್ಮ ಭಾವನೆ ಹೇಳಿದ್ದೇವೆ. 2.5 ವರ್ಷವಾದ ಮೇಲೆ ಮಂತ್ರಿ ಸ್ಥಾನ ನೀಡಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಸಂಪೂರ್ಣ ಸಂಪುಟ ಪುನರ್ ರಚನೆ ಮಾಡುತ್ತಾರೋ 4-5 ಸ್ಥಾನ ಬದಲಾವಣೆ ಮಾಡುತ್ತಾರೋ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಜ್ಯೂನಿಯರ್ ಸೀನಿಯರ್ ಅಂತ ಇಲ್ಲ. ಪಕ್ಷಕ್ಕೆ ಸೇರಿದ ಮೇಲೆ ಎಲ್ಲರೂ ಒಂದೇ. ಅದೃಷ್ಟ ಇದ್ದವರು ಮಂತ್ರಿ ಆಗುತ್ತಾರೆ. ದುರಾದೃಷ್ಟ ಇದ್ದ ನಮ್ಮಂತಹರು ಹೀಗೆ ಮಾತನಾಡುತ್ತೇವೆ. ಯಾವುದೇ ಫೀಲ್ಡ್ ಆದರೂ ಗಾಡ್ ಫಾದರ್ ಇರಬೇಕು. ಗಾಡ್ ಫಾದರ್ ಇಲ್ಲದೇ ಏನು ಮಾಡಲು ಸಾಧ್ಯವಿಲ್ಲ ಎಂದರು.

ನನ್ನ ತಂದೆ, ತಾಯಿ ಎಂಎಲ್ಎ. ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರು. ಅಂತಹ ಕುಟುಂಬದಿಂದ ಬಂದು ನನಗೆ ಇನ್ನೂ ಅವಕಾಶ ಸಿಕ್ಕಿಲ್ಲ. ಎಲ್ಲ ಇದ್ದರೂ ನನ್ನ ನಕ್ಷತ್ರ ಸರಿಯಿಲ್ಲ ಅಂತ ಕಾಣುತ್ತಿದೆ. ಹೀಗಾಗಿ ನಾನು ಇನ್ನು ಮೇಲೆ ಪೂಜೆ ಮಾಡಬೇಕು ಎಂದು ಬೇಸರ ವ್ಯಕ್ತಪಡಿಸಿದರು.

ಸಚಿವರ ಬದಲಾವಣೆ ಆದಂತೆ ಸಿಎಂ ಬದಲಾವಣೆ ಆಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ  ಅವರು,  ಸಿಎಂದು ಏನೇ ಇದ್ದರೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಅದೆಲ್ಲ ದೊಡ್ಡ ಕೆಲಸ. ಸಿಎಂ ಸ್ಥಾನದ ಬಗ್ಗೆ ನಾವು ಮಾತಾಡಲು ಆಗುವುದಿಲ್ಲ. ಅದಕ್ಕೂ ನಮಗೂ ಸಂಬಂಧ ಇಲ್ಲ. ಸಿಎಂ ಎಲ್ಲವನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಜಾರಿಕೊಂಡರು.

Leave a comment

Your email address will not be published. Required fields are marked *