ಹತ್ತಿ ಬೆಳೆಗೆ ಕೀಟನಾಶಕ ಸಿಂಪಡಿಸಿದ ನಂತರ ನಾಲ್ವರು ರೈತರು ತೀವ್ರ ಅಸ್ವಸ್ಥ
ಕಲಬುರಗಿ: ಹತ್ತಿ ಬೆಳೆಗೆ ಕೀಟನಾಶಕ ಸಿಂಪಡಿಸಿದ ನಂತರ ನಾಲ್ವರು ರೈತರು ತೀವ್ರ ಅಸ್ವಸ್ಥಗೊಂಡಿರುವ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ನಡೆದಿದೆ.
ಸುನಿಲ್ (34), ಅನಿಲ್ (22), ಕುಮಾರ್ (30) ಹಾಗೂ ಖೇಮು ರಾಠೋಡ್ ಅಸ್ವಸ್ಥಗೊಂಡ ರೈತರಾಗಿದ್ದು, ಕಲಬುರಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಾಲ್ವರು ರೈತರು ಹತ್ತಿ ಬೆಳೆಗೆ ತಗುಲಿದ ರೋಗ ನಿಯಂತ್ರಣಕ್ಕಾಗಿ ಕೀಟ ನಾಶಕ ಸಿಂಪಡಿಸಿದ್ದರು. ನಂತರ ಮನೆಗೆ ಬಂದ ತಕ್ಷಣವೇ ತಲೆಸುತ್ತು, ಹಾಗೂ ವಾಂತಿ-ಭೇದಿ ಆರಂಭವಾಗಿದೆ.
ತಕ್ಷಣ ಕುಟುಂಬಸ್ಥರು ಕಲಬುರಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ನಾಲ್ವರು ರೈತರ ಆರೋಗ್ಯದಲ್ಲಿ ನಿರಂತರ ಏರುಪೇರು ಉಂಟಾಗಿದ್ದು, ಕುಟುಂಬಸ್ಥರಲ್ಲಿ ಆತಂಕ ಹೆಚ್ಚಾಗುತ್ತಿದೆ.













































































































































































































































































































































































































































































































































































































































































































































































































































































































































































































































































































































