ಹರಿಹರ ಬ್ರಹ್ಮ ಬಂದರೂ ಹಿಂದುತ್ವ ಹತ್ತಿಕ್ಕಲು ಆಗುವುದಿಲ್ಲ
ಚಿತ್ರದುರ್ಗ, ಅ.05: ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲುತೂರಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತ 7 ಜನರನ್ನು ಚಿತ್ರದುರ್ಗ ಜೈಲಿಗೆ ಸ್ಥಳಾಂತರಿಸಿದ್ದಾರೆ. ಈ ಹಿನ್ನಲೆ ಇಂದು(ಅ.05) ಚಿತ್ರದುರ್ಗ ಕಾರಾಗೃಹಕ್ಕೆ ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ ಭೇಟಿ ನೀಡಿದ್ದರು. ಆದರೆ, ಕಾರಾಗೃಹದಲ್ಲಿ ಆರೋಪಿಗಳ ಭೇಟಿಗೆ ಸಮಯ ಮೀರಿದ ಹಿನ್ನೆಲೆ ಅಧಿಕಾರಿಗಳು ಭೇಟಿಗೆ ಅವಕಾಶ ನೀಡದ ಕಾರಣ ವಾಪಾಸ್ಸಾದರು. ಈ ವೇಳೆ ಮಾತನಾಡಿದ ಅವರು ‘ಬಂಧಿತ ಆರೋಪಿಗಳನ್ನು ಚಿತ್ರದುರ್ಗ ಜೈಲಿಗೆ ಸ್ಥಳಾಂತರಿಸಿದ್ದು ಏಕೆ ಗೊತ್ತಿಲ್ಲ ಎಂದರು.
ಹೌದು, ಭೇಟಿಗೆ ಅವಕಾಶ ಸಿಗದ ಹಿನ್ನಲೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ‘ಗಲಾಟೆ ಮಾಡಿ ಕಲ್ಲುತೂರಾಟ ಮಾಡಿರುವುದು ಮುಸ್ಲಿಂ ಕಿಡಿಗೇಡಿಗಳು, ಈ ಪ್ರಕರಣದಲ್ಲಿ ಕೆಲವು ವಿದ್ಯಾರ್ಥಿಗಳನ್ನೂ ಬಂಧಿಸಲಾಗಿದೆ. ಹರಿಹರ ಬ್ರಹ್ಮ ಬಂದರೂ ಹಿಂದುತ್ವ ಹತ್ತಿಕ್ಕಲು ಇಂತಹವರಿಂದ ಆಗುವುದಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಒಬ್ಬೊಬ್ಬರ ಪರಿಚಯವಾಗುತ್ತದೆ. ಈ ಹಿಂದೆ ಟಿಪ್ಪು ಸುಲ್ತಾನ್ ಆಯ್ತು, ಈಗ ಔರಂಗಜೇಬ್ ಬಂದಿದ್ದಾರೆ.
ಸಿದ್ದರಾಮಯ್ಯ ಆಡಳಿತದಲ್ಲೇ ಔರಂಗಜೇಬ್ ಬಂದಿದ್ದಾರೆ
ಸಿಎಂ, ಸಚಿವರ ಮಾತಿನಿಂದ ಇಂತಹ ಕೃತ್ಯಗಳಿಗೆ ಕುಮ್ಮಕ್ಕು ಸಿಕ್ಕಿದೆ. ‘ವೇಷ ಧರಿಸಿ ಬಿಜೆಪಿ ಕಾರ್ಯಕರ್ತರೇ ಕೃತ್ಯವೆಸಗಿದ್ದಾರೆಂಬ ಆರೋಪ ಕೇಳಿಬಂದಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದರು. ಅವರು ದೊಡ್ಡವರು, ಯಾಕೆ ಹೀಗೆ ಹೇಳಿದ್ರೋ ಗೊತ್ತಿಲ್ಲ. ಬಿಜೆಪಿಯವರು ಮುಖ ಮುಚ್ಚಿಕೊಂಡು ಹೋರಾಟ ಮಾಡುವ ಸ್ಥಿತಿಯಲ್ಲಿಲ್ಲ. ಏನೇ ಮಾಡಿದರೂ ನೇರವಾಗಿ ಮಾಡುತ್ತೇವೆ. ಸಚಿವರು ಇಂತಹ ಉದ್ಧಟತನದ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಅಧಿಕಾರಿಗಳ ಕೈ ಕಟ್ಟಿಹಾಕದೆ ಫ್ರೀ ಬಿಡಿ, ಕಾನೂನು ಕ್ರಮಕೈಗೊಳ್ಳುತ್ತಾರೆ ಎಂದು ಹೇಳಿದರು.














































































































































































































































































































































































































































































































































































































































































































































































































































































































































































































































































































































